ಯಾವಗಲ್ ಬಳಿ ಸಿಲುಕಿದ ನಾಲ್ವರು ಕಾರ್ಮಿಕರು-ಪರದಾಟ
ಧಾರವಾಡದಲ್ಲಿ ಮುಂದುವರಿದ ಮಳೆ- ಗದಗನಲ್ಲಿ ಬೆಣ್ಣೆ ಹಳ್ಳ ಭರ್ತಿ
ಪ್ರಜಾಪಥ ವಾರ್ತೆ
ಗದಗ: ಕಳೆದ ಮೂರು ದಿನಗಳಿಂದ ಗದಗ ಜಿಲ್ಲೆಯಲ್ಲಿ ಆರ್ಭಟಿಸಿದ್ದ ಮಳೆರಾಯ ಶುಕ್ರಚಾರ ಸಂಜೆಯಿಂದಲೇ ಕೊಂಚ ವಿರಾಮ ನೀಡಿದ್ದರೂ ನದಿ-ಹಳ್ಳದ ತಟದ ಜನ ಸಂಕಷ್ಟದಲ್ಲಿ ಸಿಲುಕಿ, ಪರದಾಡುತ್ತಿದ್ದಾರೆ.
ಈ ಮಧ್ಯೆ ಧಾರವಾಡ ಜಿಲ್ಲೆಯಲ್ಲಿ ಮಳೆ ನಿಲ್ಲದ್ದರಿಂದ ಜಿಲ್ಲೆಯ ರೋಣ ತಾಲ್ಲೂಕಿನ ಯಾವಗಲ್ ಗ್ರಾಮದ ಬಳಿಯ ಬೆಣ್ಣೆ ಹಳ್ಳದ ಸೇತುವೆ ನಿರ್ಮಾಣ ಕಾರ್ಯ ನಡೆಯುತ್ತಿತ್ತು.
ಈ ಕಾಮಗಾರಿಯಲ್ಲಿ ತೊಡಗಿದ್ದ ನಾಲ್ವರು ರಾತ್ರಿ ವೇಳೆ ಧಿಡೀರ್ ಆಗಿ ಹಳ್ಳ ತುಂಬಿ ಹರಿಯುತ್ತಿದ್ದರಿಂದ ಕಾರ್ಮಿಕರು ನಡುಗಡ್ಡೆಯಂತಾದ ಪ್ರದೇಶದಲ್ಲಿ ಸಿಲುಕಿದ್ದಾರೆ. ಸದ್ಯಕ್ಕೆ ಕಾರ್ಮಿಕರು ಸುರಕ್ಷಿತವಾಗಿದ್ದರೂ ನೀರಿನ ರಭಸದಿಂದ ಕಾರ್ಮಿಕರು ಭಯಭೀತರಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಹಡಗಲಿ ಗ್ರಾಮದ ಯಲ್ಲಪ್ಪ, ಅರುಣ ತಳವಾರ, ಪರಶುರಾಮ ಹಾಗೂ ಸಿದ್ದು ಎನ್ನುವವರು ಸಿಲುಕಿದ್ದಾರೆ.
ಸ್ಥಳಕ್ಕೆ ತಕ್ಷಣ ಧಾವಿಸುವಂತೆ ಜಿಲ್ಲಾಧಿಕಾರಿ ಎಂ.ಸುಂದರೇಶಬಾಬು ಅವರು ಅಧಿಕಾರಿಗಳಿಗೆ ನಿರ್ದೇಶಿಸಿದ್ದು, ಅವರೂ ಕೂಡ ಖುದ್ದಾಗಿ ಸ್ಥಳಕ್ಕೆ ಹೋಗುವ ಸಾಧ್ಯತೆ ಇದೆ ಎಂದು ಮೂಲಗಳು ‘ಪ್ರಜಾಪಥ’ಕ್ಕೆ ತಿಳಿಸಿವೆ. ಅಲ್ಲದೇ, ಸ್ಥಳಕ್ಕೆ ಅಗ್ನಿಶಾಮಕ ದಳ ಕೂಡಲೇ ತೆರಳಿದೆ ಎನ್ನಲಾಗಿದೆ.